ಶನಿವಾರ, ಜುಲೈ 26, 2014

ಕೂಪ ಮಂಡೂಕಗಳ ಯೋಚನೆ ಮತ್ತು ಉದ್ಯೋಗ ಸಮಸ್ಯೆ


ಕಳೆದ ಕೆಲದಿನಗಳ ಹಿಂದೆ ತುರ್ತು ರಜೆ ಮೇಲೆ ಬೆಂಗಳೂರಿಗೆ ಹೋಗಿದ್ದಾಗ ಅಮ್ಮನನ್ನು ನನ್ನ ಜತೆಯಲ್ಲಿ ಮಸ್ಕತ್ ಗೆ ಕರೆದು ಕೊಂಡು ಬರಲು ನನ್ನೂರು ರಾಂಪುರಕ್ಕೆ ಹೋಗಿದ್ದೆ. ಹೋಗಿದ್ದಾಗ ೩ ದಿನಗಳ ಕಾಲ ಅಲ್ಲಿಯೆ ಉಳಿದಿದ್ದೆ, ಅಲ್ಲಿಯೇ ಬೆಳೆದು ಓದಿ ದೊಡ್ಡವನಾದ ನನಗೆ ರಾಂಪುರ ಅಂದರೆ ಬಿಡಿಸಿಲಾರದ ಬಂಧ. ಕಳೆದು ಹೋದ ಆ ಬಾಲ್ಯ ನೆನೆಸಿಕೊಂಡು ನಾನು ಓದಿದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಡ ಶಾಲೆ ಗಳ ಸುತ್ತಮುತ್ತ ಅಡ್ಡಾಡಿ ಬಂದೆ. 

ಕೆಲ ಸಹಪಾಠಿ ಗಳನ್ನು ಸಹ ಭೇಟಿಯಾಗಿ ಉಭಯ ಕುಶಲೋಪರಿಯನ್ನು ಹಂಚಿಕೊಂಡೆವು. ನಮ್ಮ ಬಾಲ್ಯದ ಹಳೆಯ ನೆನಪೆಲ್ಲವನ್ನು ಒಂದು ಬಾರಿ ಮೆಲುಕು ಹಾಕಿ, ನನ್ನ ಬೆಂಗಳೂರು, ದುಬೈ, ಕುವೈತ್ ಮತ್ತು ಮಸ್ಕತ್ ಜೀವನದ ಅನುಭವ ವನ್ನು ಜತೆಗೆ ಕೆನಡ, ತೈವಾನ್, ಚೈನಾ ಪ್ರವಾಸ ಸಹ ಹಂಚಿಕೊಂಡೆ.


ಈಗ ರಾಂಪುರ ತುಂಬಾ ದೊಡ್ಡದಾಗಿದೆ, ೫೦೦೦೦ ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಅಂತ ಗೊತ್ತಾಯಿತು. ನಾವಿದ್ದಾಗ ಒಂದೇ ಹೈಸ್ಕೂಲು ಇತ್ತು ಹಾಗು ಆಗ ತಾನೆ ಪಿಯುಸಿ ಕಾಲೇಜು ಶುರುವಾಗಿತ್ತು. ಈಗ ಒಟ್ಟು ೪ ಪ್ರೌಡಶಾಲೆಗಳು ಅದರಲ್ಲಿ ಒಂದು ಆಂಗ್ಲ ಮಾಧ್ಯಮ ಶಾಲೆಯಿದೆ. ೪ ಐಟಿಐ ಕಾಲೇಜು, ೧ ಪದವಿ ಕಾಲೇಜು ಶುರುವಾಗಿದೆ. ಇದರ ಜತೆಗೆ ನೂರಾರು ವಿಧ್ಯಾರ್ಥಿಗಳು ೩೫ ಕಿ.ಮಿ. ದೂರದ ಬಳ್ಳಾರಿ ಮತ್ತು ೨೫ ಕಿ.ಮಿ ದೂರದ ಮೊಳಕಾಲ್ಮೂರಿಗೆ ಕಾಲೇಜುಗಳಿಗೆ ಸೇರಿದ್ದಾರೆ. ಹಾಗೂ ವೃತ್ತಿ ಪರ ಶಿಕ್ಷಣಕ್ಕಾಗಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಂಗಳೂರಿನ ಕಾಲೇಜುಗಳಲ್ಲಿ ಓದುತಿದ್ದಾರೆ ಅಂತ ತಿಳಿಯಿತು. 
ಊರು ತುಂಬ ಬದಲಾಗಿದ್ದು, ಈಗ ಕುಬೇರ ನಗರ, ಬಸವೇಶ್ವರ ನಗರ ಮತ್ತು ಹಳೇ ಊರಿನ ವ್ಯಾಪ್ತಿಯು ದೊಡ್ಡದಾಗಿದೆ.  ರಾಂಪುರದ ಮೂಲ ನಿವಾಸಿಗಳ ಆರ್ಥಿಕ ಹಾಗು ಸಾಮಾಜಿಕ ಪರಿಸ್ಥಿತಿ ಅಂತಹ ಬದಲಾವಣೆ ಯಾಗಿಲ್ಲ. ಆದರೆ ಬೇರೆ ಊರಿನಿಂದ ಬಂದು ನೆಲೆಸಿರುವವರ ಪರಿಸ್ಥಿತಿ ಮಾತ್ರ ಆಗಾಧ ಬದಲಾವಣೆ ಯಾಗಿದೆ. 
ರಾಂಪುರದಲ್ಲಿ ಸೈಟ್ ಗಳ ಬೆಲೆ ಗಗನಕ್ಕೇರಿದೆ, ಸೈಟ್ ಕೊಳ್ಳಲಿಕ್ಕೆ ೨೦-೨೫ ಲಕ್ಷ ವ್ಯಯಿಸಬೇಕಾಗುತ್ತೆ ಅನ್ನುವುದು ಬದಲಾಗಿರುವ ರಾಂಪುರದ ಇಂದಿನ ಪರಿಸ್ಥಿತಿಗೆ ಜ್ವಲಂತ ನಿದರ್ಶನ. ಊರಿನಲ್ಲಿ ಒಂದು ಶಾಶ್ವತ ನೀರಾವರಿ ಯೋಜನೆ ಯಿಲ್ಲ, ಹೊಲಗದ್ದೆಗಳೆಲ್ಲ ಬರಡಾಗಿವೆ ಜನರಲ್ಲಿ ದುಡಿಯುವುದಿಕ್ಕೆ ಹೊಸ ಮಾರ್ಗಗಳಿಲ್ಲ, ಬಸ್ಟಾಂಡಿನಲ್ಲಿ, ರಥಬೀದಿಯಲ್ಲಿ ನೂರಾರು ಅಂಗಡಿಗಳಾಗಿವೆ ಇದರಿಂದ ಕೆಲವರ ಪರಿಸ್ಥಿತಿ ಸುಧಾರಿಸಿದೆ ಅನ್ನುವುದು ಸಮಾಧಾನದ ಸಂಗತಿ.

ಊರಿನಲ್ಲಿ ನೂರಾರು ಜನ ಪದವಿಧರರಾಗಿದ್ದಾರೆ, ಇಂಜಿನೀಯರಿಂಗ್, ಡಾಕ್ಟರ್ ಮತ್ತೆಲ್ಲೋ ಕೆಲವರು ಬಿಬಿಎಮ್, ಡಿಪ್ಲೊಮಾ, ಎಮ್ಸಿಎ ಮಾಡಿಕೊಂಡ ಕೆಲವರು ಬೆಂಗಳೂರು, ಮೈಸೂರು ಮುಂತಾದ ಕಡೆ ಕೆಲಸದಲ್ಲಿದ್ದು, ಬಿಎ ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಡಿಎಡ್, ಡಿಪ್ಲೊಮಾ, ಐಟಿಐ ಶಿಕ್ಷಣ ಮುಗಿಸಿದ ೫೦೦ ಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದಾರೆ ಎನ್ನುವ ಭಯಾನಕ ಸತ್ಯ ಕೇಳಿ, ಕಣ್ಣಾರೆ ಕಂಡ ಹುಡುಗರನ್ನು ನೋಡಿದಾಗ ನಂಬದೇ ಇರಲಾಗಲಿಲ್ಲ. ರಾಂಪುರ ಒಂದು ಊರಲ್ಲಿಯೆ ಇಷ್ಟೊಂದು ಜನ ಇರಬೇಕಾದರೆ, ಬೇರೆ ಊರುಗಳಲ್ಲಿ ಇನ್ನು ಎಷ್ಟಿರಬಹುದು? ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿ ಶಿಕ್ಷಣ ಪಡೆದವರೇ, ಇವರಿಗೆಲ್ಲ ಯಾರು ಕೆಲಸ ಕೊಡ್ತಾರೆ, ಇವರ ಭವಿಷ್ಯವೇನು? ನಮ್ಮ ಶಿಕ್ಷಣ ವ್ಯವಸ್ಥೆ, ಕಾಲೇಜುಗಳು ವಿಧ್ಯಾರ್ಥಿಗಳನ್ನು ಪದವಿದರ ರನ್ನಾಗಿ ತಯಾರು ಮಾಡುವ ಫ್ಯಾಕ್ಟರಿಗಳಾಗಿಬಿಟ್ಟರೆ ಇವರಿಗೆಲ್ಲ ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿ ಕೊಡುವವರು ಯಾರು.

ನಾನು ಬೆಂಗಳೂರಿಗೆ ಬಂದು ೨೦ ವರ್ಷಗಳಾಗುತ್ತ ಬಂತು, ಮೊದಲಿಗೆ ಬಂದಾಗ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು ಬದುಕುವುದಿಕ್ಕೆ ಏನೇನು ಮಾರ್ಗ ಗಳಿವೆ ಜೀವನದಲ್ಲಿ ಮುಂದೆ ಬರುವುದು ಹೇಗೆ? ಒಂದು ನೆಲೆ ಕಂಡು ಕೊಳ್ಳುವುದು ಹೇಗೆ ಅಂತ ನೂರಾರು ಜನ ಯೋಚಿಸುತ್ತ ವರ್ಷಗಳೇ ಕಳೆದು ಹೋಗಿಬಿಡುತ್ತೆ. ಐಕ್ಯು ಜಾಸ್ತಿ ಇದ್ದವರು ಹೇಗೇಗೊ ದಾರಿ ಕಂಡು ಕೊಂಡು ಬಿಡುತ್ತಾರೆ. ಮೊದಮೊದಲಿಗೆ ಬೆಂಗಳೂರಿಗರ ತರಹ ಮಾತನಾಡುವುದನ್ನು ರೂಡಿ ಮಾಡಿಕೊಳ್ಳುತ್ತಾರೆ. ನಂತರ ಇಂಗ್ಲೀಷ್, ಹಿಂದಿ, ತಮಿಳ್, ತೆಲುಗು ಸಹ ಜತೆ ಜತೆಗೆ ಕಲಿತುಕೊಂಡು ಬಿಡುತ್ತಾರೆ. ಉತ್ತಮ ಅವಕಾಶ ದೊರೆತಾಗ, ಊರು ಬಿಟ್ಟು ಬೇರೋಂದು ಊರಿಗೆ ಹೋಗಿ ಅಲ್ಲಿ ನೆಲೆಸುತ್ತಾರೆ. ನಾನು ಸುಮಾರು ಊರುಗಳನ್ನು ಸುತ್ತಿದ್ದೇನೆ. ಭಾರತವಿರಲಿ, ಹೊರದೇಶವಿರಲಿ, ಎಲ್ಲಕಡೆಯಲ್ಲು ಹಲವಾರು ಕನ್ನಡಿಗರನ್ನು ಕಂಡಿದ್ದೇನೆ. ಬದುಕುವುದಕ್ಕೆ ಒಂದು ದಾರಿಬೇಕು, ಅದನ್ನು ಹೇಗಾದರು ಕಂಡು ಕೊಂಡುಬಿಡುತ್ತಾರೆ. ಈ ವಿಷಯದಲ್ಲಿ ಮಲೆಯಾಳಿಗಳು ಬಹಳ ಹುಷಾರು. ನಾನು ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಜನ ಮಲಯಾಳಿಗಳನ್ನು ನೋಡಿದ್ದೇನೆ. ಅವರ ಭವಿಷ್ಯಕ್ಕೆ ಅವರ ಬದುಕಿಗೆ ಅವರ ಜೀವನಕ್ಕೆ ಕೇವಲ ಕೇರಳ ಅಥವ ಮಲೆಯಾಳಿ ಭಾಷೆ ಮಾತ್ರ ಕಾರಣವಲ್ಲ ಅವರ ಭಾಷೆ ಮೇಲೆ ಯಿರುವ ಅಭಿಮಾನವಲ್ಲ, ಅವರ ಜೀವನೋತ್ಸಾಹ. ಬರೀ ದುಡಿಬೇಕು, ಬದುಕಬೇಕು ಅನ್ನೋ ಅಚಲ ನಿರ್ಧಾರ.

ಸೋಶಿಯಲ್ ಮೀಡಿಯದಲ್ಲಿ ನೆಟ್(ಅಂತರ್ಜಾಲ) ಕನ್ನಡ ಹೋರಾಟ ಗಾರರ ಒಂದು ಗುಂಪು ಇದೆ. ಅವರ ಗೋಡೆಗಳ ಮೇಲೆ ಕನ್ನಡ ಅಭಿಮಾನದ ನೂರಾರು ಪೋಸ್ಟ್ ಗಳನ್ನು ಹಾಕ್ತಿರ್ತಾರೆ. ಪ್ರತಿಯೊಂದರಲ್ಲೂ ಕನ್ನಡಭಿಮಾನದ ಅಭಿಯಾನ ಶುರುಮಾಡೋದಿಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಮಾಲ್ ಗಳಲ್ಲಿ ಕನ್ನಡ, ರೈಲ್ವೆ ನಲ್ಲಿ ಕನ್ನಡ, ಬ್ಯಾಂಕ್, ಮೆಟ್ರೊ, ಬಸ್, ವಿಮಾನ ನಿಲ್ದಾಣ ಹಾಗೂ ಬೆಂಗಳೂರಿಗೆ ಬರುವ ಎಲ್ಲ ವಿಮಾನಗಳಲ್ಲೂ ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ನ್ಯಾಯಾಲಯ ಕನ್ನಡ ಮಾಧ್ಯಮ ಶಿಕ್ಷಣ ಕುರಿತು ತೀರ್ಪು ನೀಡಿದಾಗ ಹಲವಾರು ಜನ ಅವರವರ ರೀತಿಯಲ್ಲಿ ಪ್ರತಿಕ್ರಿಯೆ ಅಭಿಪ್ರಾಯ ನೀಡಿದರು. 
ಸಂತೋಷ, ಇದೆಲ್ಲ ಸರಿ ಆದರೆ, ಈಗ ನಮ್ಮ ಊರಿನ ಹಾಗೂ ರಾಜ್ಯದ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ನಿರುದ್ಯೋಗಿಗಳಾಗಿರುವ ಸಾವಿರಾರು ಜನರ ಕಥೆ ಏನು? ಅವರಿಗೆಲ್ಲ ಮುಂದಿನ ದಾರಿಯೇನು? ಇವರಿಗೆಲ್ಲ, ಉದ್ಯೋಗವನ್ನ ಈ ಕನ್ನಡ ಅಭಿಮಾನ ಸಂಘ ಗಳು, ಸೋಶಿಯಲ್ ಮೀಡಿಯದಲ್ಲಿ ಕನ್ನಡ ನೆಟ್ ಹೋರಾಟ ಗಾರರು ಕೊಡ್ತಾರಾ? ಈ ಜನಕ್ಕೆ ಒಳ್ಳೋಳ್ಳೆ ಸಾಫ್ಟ್ ವೇರ್ ಕಂಪನಿ,  ಎಮ್ ಎನ್ ಸಿ, ಇತ್ತೀಚಿನ ಮಾಧ್ಯಮ ಗಳು, ಆಡ್ ಏಜೆನ್ಸಿ ಇನ್ನು ಮುಂತಾದಕಡೆ ಗಳಲ್ಲಿ ಲಕ್ಷಾಂತರ ಸಂಭಳ ಸಿಗುತ್ತೆ. ಇನ್ನು ಕನ್ನಡ ಸಂಘಗಳು ಆರ್ಥಿಕ ವಾಗಿ ಬಲಾಡ್ಯವಾಗಿವೆ. ಸರ್ಕಾರ ಗಾಡ ನಿದ್ರೆ ಯಲ್ಲಿದೆ. ಟಿವಿ ಮಾಧ್ಯಮಗಳಿಗೆ, ಟಿ ಆರ್ ಪಿ ಇರುವ ವಿಷಯ ಸಿಕ್ಕರೆ ಎರಡು ಮೂರು ದಿನಕ್ಕಾಗುವಷ್ಟು ಸರಕು ಸಿಕ್ಕಂತಾಗುತ್ತೆ. ಅವರೆಲ್ಲ ಇಂತಹ ಉದ್ಯೋಗ ಸಮಸ್ಯೆ ಬಗ್ಗೆ ಬೆಳಕು ಚೆಲ್ಲೋ ಪ್ರಯತ್ನ ಖಂಡಿತ ಮಾಡೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಕನ್ನಡ ಮಾಧ್ಯಮದಲ್ಲಿ ಓದಿ   ಬಿಎ, ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಮುಗಿಸಿ ಕೆಲಸ ವಿಲ್ಲದೆ ಕುಳಿತಿರುವ ಜನರ ಕುರಿತು ಯಾರು ಯೋಚಿಸ್ತಾರೆ.

ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಪ್ರತಿಯೊಬ್ಬರು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ, ಆದರೂ ವರ್ಷದಿಂದ ವರ್ಷಕ್ಕೆ ನಿರುದ್ಯೋಗ ಸಮಸ್ಯೆ ಬೆಳೆಯುತ್ತ ಇದೆ ಇದಕ್ಕೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಂತಹ ಸಮಯದಲ್ಲಿ ಸರಕಾರವನ್ನು ದೂಷಿಸಿ ಪ್ರಯೋಜನವೇನು? ನಮ್ಮ ದಾರಿ ನಾವು ಕಂಡು ಕೊಳ್ಳಬೇಕು. 

ಮಾಧ್ಯಮಿಕ ಶಾಲೆ ಯಿಂದ ಹೈಸ್ಕೂಲ್ ಗೆ ಸೇರಿದಾಗ ೮ ನೇ ತರಗತಿಯಲ್ಲಿ ಮೊದಲನೆ ದಿನದ ಇಂಗ್ಲೀಷ್ ವಿಷಯದ ಬಗ್ಗೆ ನಮ್ಮ ಗುರುಗಳಾದ ಕೆಜಿಎನ್ ಮೇಷ್ಟ್ರು ಇಂಗ್ಲೀಷ್ ಭಾಷೆ ಯ ಪ್ರಾಮುಖ್ಯತೆ ಯನ್ನು ವಿವರಿಸಿದಿದ್ದು ಇಂದಿಗೂ ಸಹ ಬಹಳ ಚೆನ್ನಾಗಿ ನೆನಪಿದೆ. ಸಂವಹನ ನಡೆಸಲು ಇಂಗ್ಲೀಷ್ ಭಾಷೆ ಎಷ್ಟು ಮುಖ್ಯ ಎನ್ನುವುದನ್ನು ನನ್ನ ಉದಾಹರಣೆ ಕೊಟ್ಟು ವಿವರಿಸಿದ್ದರು. "ಬಸ್ಟಾಂಡಿನಲ್ಲಿ ರಂಗನಾಥ ನ ಅಂಗಡಿಯಿದೆ, ಅಲ್ಲಿ ಒಂದು ಕಾರು ಬಂದು ನಿಲ್ಲಿಸಿ ಕೆಲವರು ವಿಳಾಸದ ಬಗ್ಗೆ ವಿಚಾರಿಸಲು ರಂಗನಾಥನ ಅಂಗಡಿ ಬಳಿ ಬರುತ್ತಾರೆ, ಆದರೆ ಅವರಿಗೆ ಕನ್ನಡ ಬರಲ್ಲ ಇಂಗ್ಲೀಶ್ ಅಥವ ಹಿಂದಿ ಬರುತ್ತೆ ಅಂದ್ಕೊಳ್ಳಿ, ಆಗ ರಂಗನಾಥ ನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರದೆ ಇದ್ದರೆ ಭಾಷಾ ಸಮಸ್ಯೆ ಎದುರಾಗುತ್ತೆ ಅವರಿಗೆ ಸರಿಯಾಗಿ ಉತ್ತರ ಕೊಡಲಿಕ್ಕೆ ಆಗದೆ ತಡಬಡಾಯಿಸುತ್ತಾನೆ, ಅಥವ ವಿದೇಶ ಪ್ರವಾಸದ ಅವಕಾಶ ಸಿಕ್ಕಾಗ ಅಲ್ಲಿ ಕಮ್ಯುನಿಕೇಶನ್ ಗೆ ಇಂಗ್ಲೀಷ್ ಅತ್ಯಗತ್ಯ, ಹೀಗೆ ಎಲ್ಲ ಕಾರಣದಿಂದ ಇಂಗ್ಲೀಷ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಆದ್ದರಿಂದ ತಾವೆಲ್ಲರು ಮನಸಿಟ್ಟು ಅಭ್ಯಸಿಸಿದರೆ ಮುಂದೆ ಇದರ ಪ್ರಯೋಜನ ಖಂಡಿತ ಅಂತ ಹೇಳಿದ್ದು ಇನ್ನು ನನಗೆ ಚೆನ್ನಾಗಿ ನೆನಪಿದೆ. ಅದರ ಅನುಭವ ಈಗ ಆಗ್ತಾಯಿದೆ. ಕೂಪ ಮಂಡೂಕ ತರಹ ನಾನು ಬೇರೆ ರೀತಿಯಲ್ಲಿ ಆಲೋಚಿಸಿದಿದ್ದರೆ ಇಷ್ಟೆಲ್ಲ ಜೀವನಾನುಭವ ಖಂಡಿತ ನನಗೆ ಆಗ್ತಾಯಿರಲಿಲ್ಲ.

ಕನ್ನಡಮಾಧ್ಯಮದಲ್ಲಿ ಕಲಿತು ವಿಜ್ನಾನಿಗಳಾಗಿದ್ದಾರೆ, ಇಂಜಿನೀಯರ್ ಗಳಾಗಿದ್ದಾರೆ, ಡಾಕ್ಟರ್ ಗಳಾಗಿದ್ದಾರೆ ಅಂತ ಯಾವಾಗಲು ಹೇಳ್ತಾರೆ, ಆದರೆ ಅವರ ಹೆಸರನ್ನು ಹೆಸರಿಸಿ ಅಂದರೆ, ಸರ್ ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್ ರಾವ್ ಇನ್ನು ಮುಂತಾದ ಖ್ಯಾತ ನಾಮರ ಹೆಸರು ಮಾತ್ರ ಹೇಳ್ತಾರೆ. ಅಲ್ಲ ಸ್ವಾಮಿ ನಾವು ಕನ್ನಡಿಗರು ೬ ಕೋಟಿ ಜನ ಇದೀವಿ, ಉದಾಹರಣೆ ಕೊಡಿ ಅಂದರೆ ೨೦-೩೦ ಹೆಸರು ಮಾತ್ರ ಹೇಳ್ತಿರಾ! ಆದರೆ ಮಿಕ್ಕ ಜನರ ಬಗ್ಗೆ ಯಾಕೆ ಏನ್ ಹೇಳಲ್ಲ? 
ಒಂದು ಗ್ರಾಮದಲ್ಲಿ  ೧೦೦-೨೦೦ ಜನ ಹೈಸ್ಕೂಲ್ ವಿಧ್ಯಾರ್ಥಿ ಗಳಲ್ಲಿ ಬೆರಳಣಿಕೆ ಯಷ್ಟು ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗ್ತಾರೆ. ಕಾರಣ ಪಿಯುಸಿ ಪಿ.ಸಿ.ಎಮ್.ಬಿ ನಲ್ಲಿ ಅತಿ ಹೆಚ್ಚಿನ ಜನ ಫ಼ೇಲ್ ಆಗುತ್ತಾರೆ. ಮುಂದೆ ಶಿಕ್ಷಣ ಮುಂದುವರೆಸಿಲಿಕ್ಕೆ ಆಗದೆ ಬಿಕಾಮ್ ಅಥವ ಬಿಎ ಮಾಡ್ತಾರೆ. ನಂತರ ಉದ್ಯೋಗ ವಿಲ್ಲದೆ ಪರದಾಡುತ್ತಾರೆ. ಒಂದು ಜಿಲ್ಲೆಯಿಂದ ಪ್ರತಿ ವರ್ಷ ೧೦೦-೨೦೦ ಜನ ಪ್ರತಿಭಾನ್ವಿತ ವಿಧ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ವ್ಯಾಸಂಗ ಮಾಡಿ ಅವರ ಭವಿಷ್ಯ ರೂಪಿಸಿ ಕೊಳ್ತಾರೆ, ಮಿಕ್ಕವರು ಏನೋ ಮಾಡಿಕೊಂಡು ಅವರ ಬದುಕಿನ ದಾರಿಯನ್ನು ಕಂಡು ಕೊಳ್ತಾರೆ.






ಕೇರಳದಲ್ಲಿ ಕೈಗಾರಿಕ ಉದ್ದಿಮೆ ಗಳು ಬಹು ಕಡಿಮೆ, ಜನ ಉದ್ಯೋಗಕ್ಕಾಗಿ ಸರ್ಕಾರಿ ಕೆಲಸವನ್ನು ನೆಚ್ಚಿ ಕುಳಿತುಕೊಳ್ಳುವುದಿಲ್ಲ. ಉದ್ಯೋಗ ಅರಸಿ ವಲಸೆ ಹೋಗುತ್ತಾರೆ. ಗಲ್ಫ್ ರಾಷ್ಟ್ರ ಗಳಲ್ಲಿ ಕೇರಳದ ಜನ ವಿಜ್ನಾನಿ ಯಿಂದ ಹಿಡಿದು ಡ್ರೈವರ್ ಕೆಲಸದವರೆಗೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಅವಕಾಶ ಹುಡುಕಿಕೊಂಡು ಲಕ್ಷಾಂತರ ಜನ ಕೆಲಸ ಮಾಡ್ತಿದ್ದಾರೆ. ಇವರಿಗೆ ಹೋಲಿಸಿದರೆ ನಮ್ಮ ಕರ್ನಾಟಕದ ಜನ ಪ್ರತಿಶತಃ ೪-೭ ರಷ್ಟಿರಬಹುದು. ಅದೂ ಮಂಗಳೂರು, ಉಡುಪಿ ಯವರು ಮಾತ್ರ. ಮಿಕ್ಕವರು ಅಪ್ಪ ಹಾಕಿದ ಆಲದ ಮರ ಅಂದು ಕೊಂಡು ಹುಟ್ಟಿದ ಊರಿನಲ್ಲಿ ಏನೋ ಕೆಲಸ ಮಾಡಿಕೊಂಡು ಆರಕ್ಕೇರದೇ ಮೂರಕ್ಕಿಳಿಯದೆ ಇದ್ದೇವೆ. 

ಕರ್ನಾಟಕದ ಮೂಲೆ ಮೂಲೆಯಲ್ಲು ಒಂದು ಕಾಕ ಅಂಗಡಿಯನ್ನು ಕಾಣಬಹುದು, ಇಲ್ಲ ಅಂದರೆ ಒಂದು ಬೇಕರಿಯನ್ನು ನೋಡಬಹುದು. ಮಲೆಯಾಳಿ ಗಳನ್ನು ನಾವು ಕಲಿಯುವುದು ಬಹಳಷ್ಟಿದೆ.  

ವಿಜ಼್ನಾನ, ಗಣಿತ ವನ್ನು ನಾವು ಕನ್ನಡದಲ್ಲಿ ಕಲಿತು ಸಾಧಿಸ ಬೇಕಾದದ್ದು ಏನು ಇಲ್ಲ. ಜಾಗತಿಕರಣದ ಈ ಜಗದಲ್ಲಿ ನಾವು ಆ ಪ್ರವಾಹದೊಂದಿಗೆ ಮುನ್ನುಗಬೇಕು. ಅದಕ್ಕಾಗಿ ವಿಶಾಲ ಮನೋಭಾವ ವನ್ನು ಹೊಂದಿ, ಯಾವುದೇ ಸಮಯ ಸಂಧರ್ಭ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡುವ ಮನಸ್ಥಿತಿ ಯನ್ನು ರೂಪಿಸಿಕೊಳ್ಳಬೇಕು. ಸಂಕುಚಿತ ಮನಸ್ಸಿನಿಂದ ಆಲೋಚಿಸಿ ನಮ್ಮ ಭವಿಷ್ಯವನ್ನು ನಾವು ಹಾಳುಮಾಡಿ ಕೊಳ್ಳುವುದು ಬೇಡ. ಇದೆಲ್ಲ ಹೊಟ್ಟೆ ತುಂಬಿದ ಜನರಿಗೆ ಅರ್ಥವಾಗಲ್ಲ.

ಶುಕ್ರವಾರ, ಮೇ 9, 2014

ಹಲೋ ಸಿನಿಮಾದವ್ರೆ, ಏನ್ ಸ್ವಾಮಿ ಮಲಗಿದ್ದೀರಾ?

ಡಬ್ಬಿಂಗ್ ವಿಷಯದಲ್ಲಿ ಮೂರನೆ ಕಣ್ಣು, ನಾಲ್ಕನೇ ಕಣ್ಣು ಅಂತ ಏನೇನೋ ಬಡಬಡಾಯಿಸ್ತಿದ್ದ ಸಿನಿಮಾ ಮಂದಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಅನ್ನುವ ಸುಪ್ರಿಂಕೊರ್ಟ್ ತೀರ್ಪಿನ ಬಗ್ಗೆ ಚಕಾರ ವೆತ್ತದೆ ಸುಮ್ಮನೆ ಇರೋದು ನೋಡಿದರೆ ಇವರ ನಿಜವಾದ ಕನ್ನಡ ಪ್ರೇಮ ಇಂದು ಬಯಲಾಗುತ್ತಿದೆ.

ಅಪ್ಪಾಜಿ ಡಬ್ಬಿಂಗ್ ಬೇಡ ಅಂದ್ರು ಅದಕ್ಕೆ ನಾನು ಬೇಡ ಅಂತೀನಿ ಅಂತ ಹೇಳಿದ್ರಿ, ಅಲ್ಲ ಸ್ವಾಮಿ, ಅಪ್ಪ ರಾಜಕೀಯ  ಬೇಡ ಅಂದಿದ್ರು ಆದ್ರೆ ಹೆಂಡತಿ ರಾಜಕೀಯಕ್ಕೆ ಬಂದ್ರೆ ಆಕ್ಷೇಪವಿಲ್ಲ ಅಲ್ವೇ, ಎಂಥ ದ್ವಂದ್ವ ನಿಲುಗಳು ನಿಮ್ಮದು. ಹೀಗೆ ದ್ವಂದ್ವ ತತ್ವಗಳಲ್ಲಿ ಮುಳುಗಿರುವವರಿಗೆ ಕನ್ನಡದ ಕಾಳಜಿ ಯಾವ ಮುಖ್ಯ ಅಲ್ವಾ? ಅವಾಗವಾಗ ಒಂದು ಮಾತು ಹೇಳ್ತಾ ಇರ್ತೀರಾ? ನಾನು ಹುಟ್ಟಿದ್ದು ಓದಿದ್ದು ಮದ್ರಾಸ್ ನಲ್ಲಿ, ನನ್ನ ಹೆಚ್ಚಿನ ಸ್ನೇಹಿತರು ಇದ್ದಿದ್ದು ಮದ್ರಾಸ್ ನಲ್ಲಿ. ಹಾಗಾಗಿ ಕನ್ನಡ ನನಗೆ ಅಷ್ಟೊಂದು ಚೆನ್ನಾಗಿ ಬರಲ್ಲ. ಆದರೆ ೩೦ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದೀರ, ಈ ಮೂವತ್ತು ವರ್ಷದಲ್ಲಿ ಸ್ಪಷ್ಟವಾಗಿ ಸುಲಲಿತವಾಗಿ ಮಾತಾನಾಡೋದು ಕಲೀಲಿಲ್ವ ನೀವು?

ಹಾಸ್ಯನಟ ಜಗ್ಗೇಶ್ ಡಬಾಲ್ ಡುಬಾಲ್ ಅಂತ ಅಂದು ಡಬ್ಬಿಂಗ್ ಹೋರಾಟದಲ್ಲಿ ಕಾಮಿಡಿ ಮಾಡಿದ್ದ, ಮೀಟರ್ ಇದ್ದರೆ ಜನರ ಮಧ್ಯೆ ಬಂದು ಡಬ್ಬಿಂಗ್ ಬೇಕು ಅಂದು ಗುಡುಗಿದ್ದ. ಜಗ್ಗೇಶ್ ಸಿನಿಮಾ ಜೀವನದಲ್ಲಿ ನೆನಪಿನಲ್ಲಿ ಉಳಿದುಕೊಳ್ಳುವಂತೆ ಮಠ ಮತ್ತು ಎದ್ದೇಳು ಮಂಜುನಾಥ ಕೊಟ್ಟ ನಿರ್ದೇಶಕ ಗುರುಪ್ರಸಾದ್ ಹೆಸರು ಪ್ರಸ್ತಾಪಿಸದೆ ''ಎರಡು ಚಿತ್ರ ಮಾಡಿ ಏಳು ವರ್ಷ ಪ್ರಚಾರ ಪಡೆದ ಸಣ್ಣ ಹುಡುಗ ತಾನು 28 ವರ್ಷಗಳಿಂದ ಸಿನಿಮಾ ಸರ್ವೆ ಮಾಡಿದ್ದೀನಿ ಎಂದು ಹೇಳಿದ್ದಾನೆ. ಆತನಿಗೀಗ 38 ವರ್ಷ. ಚಿಕ್ಕ ವಯಸ್ಸಿನಲ್ಲಿ ತಲೆಗೆ ಏಟು ಬಿದ್ದು, ಗಾಯವಾಗಿದೆ ಅನಿಸುತ್ತದೆ. ಹಾಗಾಗಿ ಹೀಗೆಲ್ಲ ಮಾತನಾಡುತ್ತಿದ್ದಾನೆ,'' ಎಂದಿದ್ದ. ಕನ್ನಡವನ್ನು ಗುತ್ತಿಗೆ ಪಡೆದುಕೊಂಡವನಂತೆ ಅಂದು ಬಡಬಡಾಯಿಸಿದ್ದ. 

ಆದರೆ ಇತ್ತೀಚಿಗೆ ತನ್ನ ಮಗನಿಗೆ ಪರಂಗಿ ಹೆಣ್ಣು ತಂದುಕೊಂಡು ತನ್ನ ಅತೀವ ಕನ್ನಡ ಪ್ರೇಮ ಮೆರೆದಿದ್ದಾನೆ. ಇಂದು ಸುಪ್ರಿಂ ಕೋರ್ಟ್ ತೀರ್ಪಿನ ಬಗ್ಗೆ ಏನೂ ಮಾತಾಡದೆ ಸುಮ್ಮನೆ ಇದ್ದಾನೆ. ಇದೇ ನೋಡಿ ಇವನ ಕನ್ನಡ ಪ್ರೇಮ. ಇವನ ಸಿನಿಮಾಗಳಲ್ಲಿ ಎಂತೆಂಥಾ ಕನ್ನಡ ಶಬ್ದಗಳು ...... ಡಗಾರ್, ಅಯ್ಯನ್, ಅಕ್ಕನ್, ಆಂವ್,  ಮ್ಯಾಂವ್, ...!!! ಅಂದು ಹೋರಾಟದಲ್ಲಿ, ,  ‘ಗಾಸಿಪ್ ಮಾಂಗಿಂಗ್’,‘ಮೀಟರ್’, ‘ಆಯಮ್ಮನ ಜೊತೆ ಅಫೇರ್’ ಮುಂತಾದ ಕನ್ನಡ ಶಬ್ಧಗಳು ಯಥೇಚ್ಛವಾಗಿ ಉಪಯೋಗಿಸಿದ್ದ.

ಈ ಸಿನಿಮಾ ಮಂದಿಗೆ ಸರಿಯಾಗಿ ಸ್ಪಷ್ಟ ಕನ್ನಡ ಮಾತನಾಡೋದು ಬರಲ್ಲ, ಇವರ ಮನೆ ಮಂದಿಯೆಲ್ಲ ಕಲಿಯೋದು ಪ್ರತಿಷ್ಟಿತ ಆಂಗ್ಲ ಮಾದ್ಯಮ ಶಾಲೆಗಳಲ್ಲಿ, ಮಾತನಾಡೋದು ಒಂದು, ನಡೆದು ಕೊಳ್ಳೋದು ಇನ್ನೊಂದು, ವಿಷಯ ಹೀಗಿರುವಾಗ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ?

ಇವರಿಗೆ ಅವರ ಮಾರ್ಕೆಟ್ ಹಾಗು ಅವರ ಸಿನಿಮಾ ಬಗ್ಗೆ ಇರೋ ಕಾಳಜಿ ಬಿಟ್ರೆ, ರಾಜ್ಯದ ಬೇರೆ ಯಾವ ವಿಷಯದಲ್ಲಿ ಇವರು ಮೂಗು ತೂರಿಸುತ್ತಾರೆ? ರೈತರ ಆತ್ಮಹತ್ಯೆ ವಿಷಯದಲ್ಲಿ ಕನಿಷ್ಟ ಪಕ್ಷ ಒಂದು ಕುಟುಂಬಕ್ಕಾದಾರು ಸಾಂತ್ವನ ಹೇಳಿದ್ದಾರ? ಇಲ್ಲವೇ ರೈತರಿಗೆ ಒಂದು ನೈತಿಕ ಬೆಂಬಲ ಕೊಟ್ಟಿದ್ದಾರ? ಬೆಂಗಳೂರಿನಲ್ಲಿ ಪರಭಾಷಿಕರ ದಬ್ಬಾಳಿಕೆ ನಿರಂತರ ನಡೆಯುತ್ತೆ, ಕೆಲವು ಏರಿಯಾಗಳು ಪರಭಾಷಿಕರ ಸ್ವತ್ತಾಗಿವೆ, ಅಂಥವರಿಗೆ ಕರ್ನಾಟಕದಲ್ಲಿ  ಕನ್ನಡಿರಾಗಿ ಬದುಕಿ ಅಂತ ಎಂದಾದರು ಕರೆ ಕೊಟ್ಟಿದ್ದಾರ? ಬೆಳಗಾವಿ ವಿಷಯದಲ್ಲಿ ಎಮ್.ಇ,ಎಸ್ ಕಿಡಿ ಹಚ್ಚಿದಾಗ ಇವರು ಏನು ಮಾಡಿದ್ದಾರೆ? ಕಾವೇರಿ ನೀರಿನ ವಿವಾದ ತಾರಕಕ್ಕೆ ಏರಿದಾಗ ಮಾತ್ರ ಒಂದು ಎಂಟ್ರಿ, ಅದೂ ಸಹ ಲೇಟ್ ಎಂಟ್ರಿ.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉಡುಪಿ ಮಂಗಳೂರು, ಹೀಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಕನ್ನಡವನ್ನು ವಿವಿಧ ಶೈಲಿ ಗಳಲ್ಲಿ ಜನ ಮಾತಾನಾಡುತ್ತಾರೆ. ಅಲ್ಲಿನ ಭಾಷಾ ಸೊಗಡಿಗೆ ಗೌರವ ಕೊಟ್ಟು ಅಲ್ಲಿನ ಭಾಷೆಗಳನ್ನು ಉಪಯೋಗಿಸಿ ವರ್ಷಕ್ಕೆ ಒಳ್ಳೆಯ ಎಷ್ಟು ಸಿನಿಮಾ ಗಳನ್ನು ಇವರು ಮಾಡಿದ್ದಾರೆ. ಎಲ್ಲೋ ಆಗೊಂದು ಹೀಗೋಂದು ಸಿನಿಮಾ ಮಾಡಿದ್ದು ಬಿಟ್ಟರೆ, ಅಲ್ಲಿನ ಭಾಷೆಗಳನ್ನು ಹಾಸ್ಯಕ್ಕೆ ಉಪಯೋಗಿಸಿದ್ದೆ ಹೆಚ್ಚು. ಪಕ್ಕದ ಆಂಧ್ರ, ತಮಿಳುನಾಡಿ ನಲ್ಲಿ ವರ್ಷಕ್ಕೆ ಎರಡು ಮೂರಾದ್ರು ಪ್ರಾಂತೀಯ ಸಿನಿಮಾಗಳನ್ನು ಮಾಡುತ್ತಾರೆ. ಅದೂ ಅಲ್ಲದೆ ಅಲ್ಲಿನ ಸಿನಿಮಾಗಳು ಪ್ರತಿಜಿಲ್ಲೆ ಯಲ್ಲೂ ಚೆನ್ನಾಗಿ ಓಡುತ್ತವೆ. ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇದಕ್ಕೆ ಇವರೇ ಕಾರಣ ಹೊರತು ಕರ್ನಾಟಕದ ಜನಸಾಮಾನ್ಯರಲ್ಲ. ಆ ಅಭಿರುಚಿ ಯನ್ನು ಬೆಳೆಸುವಲ್ಲಿ ಇವರು ವಿಫಲರಾಗಿದ್ದಾರೆ.

ಇವರ ಸಿನಿಮಾ ಗಳಲ್ಲಿ  ಹೊಸ ಪೀಳಿಗೆಯನ್ನು ಗುರಿಯಾಗಿಟ್ಟುಕೊಂಡು ಬಂದ ಇತ್ತೀಚಿನ ವರ್ಷಗಳಲ್ಲಿ ಬಂದ ಕೆಲ ಹಾಡುಗಳು ಸಾಹಿತ್ಯದ ಅರ್ಥವನ್ನೇ ಹಾಳುಮಾಡಿವೆ, 
೧. ಅಮ್ಮಾ ಲೂಸಾ, ಅಪ್ಪ ಲೂಸಾ,
೨. ಚಿಂಗಾರಿ ಚಿತ್ರದ ಯಬುಡ ಗಿಬುಡ
೩. ಕರಡೀಗೆ ಕತ್ತಲಿ ಜಾಮೂನು
೪. ಬಚ್ಚನ್ ಚಿತ್ರದ ಮೈಸೂರ್ ಪಾಕಲ್ಲಿ... ಟೋಟಲ್ ಆಗಿ... ಎಷ್ಟು ತೂತಿದೆ?
೫.'ಜಾಕಿ' ಚಿತ್ರದಲ್ಲಿ 'ಎಕ್ಕಾ ರಾಜ ರಾಣಿ ನಿನ್ನ ಕೈಯೊಳಗೆ', 
೬. 'ಹುಡುಗರು' ಸಿನಿಮಾದಲ್ಲಿ 'ಬೋರ್ಡು ಇರದ ಬಸ್ಸನು..', 
೭. 'ಜೋಗಯ್ಯ' ಚಿತ್ರದ 'ಕುರಿ ಕೋಳಿನ ಸೋಮವಾರ-ಶನಿವಾರ ಕುಯ್ಯಂಗಿಲ್ಲ'.. 
೮. 'ಲೈಫು ಇಷ್ಟೇನೆ' ಚಿತ್ರದ 'ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು'.. 
೮. 'ಪರಮಾತ್ಮ' ಚಿತ್ರದ 'ಆಲೂಗಡ್ಡೇನಾ.. ಗೋಡೆ ಹಲ್ಲಿನಾ..' '
೯. ಜಾನಿ' ಚಿತ್ರದ 'ಊರಿಗೊಬ್ಬಳೆ ಪದ್ಮಾವತಿ' 
ಹೀಗೆ ಒಂದಾ ಎರಡಾ...... ಕರ್ನಾಟಕದ ಜನತೆಗೆ ಅದರಲ್ಲೂ ಯುವ ಪೀಳಿಗೆಗೆ ಯಾವ ಸಂದೇಶವನ್ನು ಇವರು ಕೊಡಲು ಹೊರಟಿದ್ದಾರೆ? ಒಬ್ಬರಾದರು ಇಂತಹ ಸಾಹಿತ್ಯವನ್ನು ಖಂಡಿಸಿದ್ದಾರಾ? 

ಈ ಚಿತ್ರರಂಗದ ಜನರಿಗೆ ಅವರ ಚಿತ್ರ ಯಶಸ್ಸು ಕಾಣೋದು ಮುಖ್ಯ. ಅದಕ್ಕಾಗಿ ಚಿತ್ರ ನಟಿಯ ಹೊಟ್ಟೆ, ಸೊಂಟ, ಹೊಕ್ಕಳು, ಬರೀ ಬೆನ್ನು, ಸಾಧ್ಯವಾದರೆ ಸಂಪೂರ್ಣ ಬೆತ್ತಲೆ ಯಾಗಿ ತೋರಿಸೋದಿಕ್ಕೆ ಸಹ ಹಿಂಜರಿಯೋದಿಲ್ಲ. ಅಗ್ರಜ ಚಿತ್ರದಲ್ಲಿ, ಚಿತ್ರನಟಿ ಸಂಜನಾ ರವರ ಬೆತ್ತಲೆ ಮಲಗಿರುವ ದೃಶ್ಯದಲ್ಲಿ ಬರಿ ಬೆನ್ನನ್ನು ತೋರಿಸಲು ಬೇರೆ ನಟಿಯ ಡ್ಯೂಪ್ ಬಳಸಲಾಗಿದೆ ಎಂದು ನಟಿ ಸಂಜನಾ ಆರೋಪಿಸಿದ್ದಾರೆ. ಆದರೆ ಹಾಸ್ಯನಟ ಜಗ್ಗೇಶ್ ಮಾತ್ರ ಈ ಬಗ್ಗೆ ಕಮಕ್ ಕಿಮಕ್ ಎಂದಿಲ್ಲ. ಇಲ್ಲೇ ಗೊತ್ತಾಗುತ್ತೆ ಇವರ ಉಳಿವಿಗಾಗಿ ಅಥವ ಅವರ ಚಿತ್ರದ ಯಶಸ್ಸಿಗಾಗಿ ಬೇರೆಯವರನ್ನು ಹೇಗೆ ಬೇಕಾದರೆ ಹಾಗೆ ಉಪಯೋಗಿಸ್ಕೊಬಹುದು ಅಂತ.

ಇವರು ಮೊದಲು ಸಂಪೂರ್ಣ ಕರ್ನಾಟಕ ಜನರ ವಿಶ್ವಾಸ ಗಳಿಸಬೇಕು, ಕರ್ನಾಟಕ ಜನರ ವಿಶ್ವಾಸ ಗಳಿಸ ಬೇಕಾದರೆ, ಜನರಿಗೆ ಒಳ್ಳೆಯ ಸದಭಿರುಚಿಯ ಚಿತ್ರ ಗಳನ್ನು ಕೊಡಬೇಕು. ಜನರ ಸಮಸ್ಯೆಗಳಿಗೆ ಆಗು ಹೋಗುಗಳಿಗೆ ಸ್ಪಂದಿಸಬೇಕು. ಆಗ ಜನ ಇವರ ಕೈ ಹಿಡಿತಾರೆ, ಇಲ್ಲದೆ ಹೋದರೆ out of date ಆಗಿ expiry ಆಗೋದು ಖಂಡಿತ.


ಗುರುವಾರ, ಏಪ್ರಿಲ್ 24, 2014

"ಅವರು ದುಡ್ಡು ಮಾಡಿದ್ದರು ಆದರೆ ಕಳಂಕಿತರಾಗಿರಲಿಲ್ಲ"


ನಿನ್ನೆ ಮೃತರಾದ ಎ.ಕೃಷ್ಣಪ್ಪ ನವರ ಕುರಿತು ಪತ್ರಕರ್ತ ಲಕ್ಷಣ್ ಹೂಗಾರ್ ಸುವರ್ಣ ಟಿವಿಯಲ್ಲಿ ಚರ್ಚೆ ನಡೆಸುತಿದ್ದಾಗ ಒಂದು ಮಾತು ಹೇಳಿದರು "ಅವರು ದುಡ್ಡು ಮಾಡಿದ್ದರು ಆದರೆ ಕಳಂಕಿತರಾಗಿರಲಿಲ್ಲ", ಅವರು ಕಳಂಕಿತರು ಇವರು ಕಳಂಕಿತರಲ್ಲ ಅನ್ನೋ ಸರ್ಟಿಫಿಕೆಟ್ ಕೊಡೋದಿಕ್ಕೆ ಇವರ್ಯಾರು ಸ್ವಾಮಿ. ಇತ್ತೀಚಿಗೆ ಕೆಲ ಪತ್ರಕರ್ತ ರಿಂದ ನ್ಯಾಯಾದೀಶರಂತೆ ತೀರ್ಪು ಕೊಡುವ ಒಂದು ಪರಿಪಾಟ ಶುರುವಾಗಿದೆ. 

ಒಬ್ಬ ಕಾರ್ಮಿಕ ಮುಖಂಡ ಕೋಟ್ಯಾಂತರ ಆಸ್ತಿ ಮಾಡೋದಿಕ್ಕೆ ಹೇಗೆ ಸಾಧ್ಯ ಅನ್ನೋ ಒಂದು ಸಾಮಾನ್ಯ ಜ್ಞಾನ ಇವರಿಗೆ ಹೊಳೀಲಿಲ್ವ. ಕಳೆದ ವಿಧಾನ ಸಭೆ ಚುನಾವಣೆ(೨೦೧೩) ವೇಳೇ ಆದಾಯ ತೆರಿಗೆ ಅಧಿಕಾರಿ ಗಳು ದಾಳಿ ನಡೆಸಿ ೨.೨೦ ಕೋಟಿ ಹಣ, ೧.೮೮ ಕೋಟಿ ಬೆಲೆಬಾಳುವ ಒಡವೆ ಗಳು ಹಲವಾರು ಆಸ್ತಿ ದಾಖಲೆ ಪ್ರಮಾಣ ಪತ್ರ ಗಳನ್ನು ವಶ ಪಡಿಸಿಕೊಂಡಿದ್ದರು.

೨೦೧೪ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಯಲ್ಲಿ ೭೦ಕೋಟಿ ಮೌಲ್ಯದ ಆಸ್ತಿ ಯನ್ನು ಘೋಷಿಸಿಕೊಂಡಿದ್ದರು. ಇದು ತೋರಿಕೆಗೆ ಮಾತ್ರ, ಇದು ಸರಿಯೋ ಅಥವ ತಪ್ಪು ಮಾಹಿತಿಯೋ ಅಂತ ಯಾರೂ ಹುಡುಕೋದಿಕ್ಕೆ ಹೋಗಿಲ್ಲ. 
ಕೆ.ಆರ್.ಪುರ, ಹೊಸಕೋಟೆ ಸುತ್ತಮುತ್ತ ಹಲವಾರು ಎಕರೆ ಜಮೀನು ಗಳು , ಹಲವಾರು ಶಿಕ್ಷಣ ಸಂಸ್ಥೆಗಳು ಇನ್ನು ಮುಂತಾದ ಆಸ್ತಿಯನ್ನು ಮಾಡಿರುವ ಇವರು ದುಡಿದಿದ್ದು ನ್ಯಾಯಯುತವಾದ ದಾರಿಯಿಂದ ಅಂಥ ಸಾಕ್ಷಿ ಸಮೇತ ತೋರಿಸಲಿಕ್ಕೆ ಲಕ್ಷ್ಮಣ್ ಹೂಗಾರ್ ರವರಿಗೆ ಸಾಧ್ಯವಾಗುತ್ತ ?

ಹುಸಿ ಜಾತ್ಯಾತೀತವಾದಿಗಳಿಗೆ ಕೆಲವು ಪ್ರಶ್ನೆಗಳು.


ಪ್ರಶ್ನೆಗಳು ಚೆನ್ನಾಗಿವೆ, ಆದರೆ ಇಲ್ಲೊಂದು ಸಿಕ್ಕು ಇದೆ. ಯಾರಾದರು ಉತ್ತರ ಕೊಟ್ಟರೆ, ಅವರು ಹುಸಿ ಜಾತ್ಯಾತೀತವಾದಿಗಳು ಅಂತ ಗುರ್ತಿಸಿಕೊಳ್ಳಬೇಕಾಗುತ್ತೆ ಯಾಕೆಂದರೆ, ಈ ಪ್ರಶ್ನೆಗಳು ಹುಸು ಜಾತ್ಯಾತೀತ ವಾದಿಗಳಿಗೆ ಮಾತ್ರ.


ಬುಧವಾರ, ಏಪ್ರಿಲ್ 23, 2014

ನಿರಂತರ

ಒಂದು ಹೊಸ ಬ್ಲಾಗ್ ಶುರು ಮಾಡ್ಬೇಕು ಅಂತ ತುಂಬಾ ದಿನದಿಂದ ಯೋಚಿಸ್ತಾಯಿದ್ದೆ. ದಿನ ನಿತ್ಯದ ಆಗು ಹೋಗುಗಳ ಬಗ್ಗೆ, ರಾಜಕೀಯ, ಸಿನಿಮಾ, ಮಾಧ್ಯಮ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನನಗನಿಸಿದ್ದನ್ನು ದಾಖಲಿಸುತ್ತ ಹೋಗಬೇಕು ಅಂತ ಅನಿಸುತ್ತಾಯಿತ್ತು. ಬ್ಲಾಗ್ ಗೆ ಹೆಸರಿಡಬೇಕಲ್ಲ, ಏನಪ್ಪ ಹೆಸರಿಡೋದು ಅಂತ ಎರಡು ಮೂರುದಿನ ತಲೆ ಕೆರೆದುಕೊಂಡೆ. ಕೂದಲು ಮಾತ್ರ ಬಿತ್ತು, ಹೆಸರು ಮಾತ್ರ ಹೊಳೀಲಿಲ್ಲ. 

ಒಂದು ದಿನ ಒಂದು ಹೆಸರು ಹೊಳೆಯಿತು ನೋಡೀ "ನಿರಂತರ" ಅಂತ. ಅದನ್ನ ಯಾಕೆ ಹಿಡಿದುಕೊಂಡೆ ಅಂದರೆ, 
ಬದುಕು ನಿರಂತರ
ಕಾಯಕ ನಿರಂತರ
ಹೋರಾಟ ನಿರಂತರ
ರಾಜಕೀಯ ನಿರಂತರ
ಸುದ್ದಿ ಪ್ರಸಾರ ನಿರಂತರ
ಚಿತ್ರ ನಿರ್ಮಾಣ ನಿರಂತರ
ಉಳಿವಿಗಾಗಿ ಹೋರಾಟ ನಿರಂತರ
ಉಂಡು ಮಲಗೋದು.......... ನಿರಂತರ

ಅಬ್ಬಬ್ಬ ಎಲ್ಲನೂ ನಿರಂತರ ನೋಡೀ, ಸರಿ ಇದೇ ಇರಲಿ ಅಂತ ಶುರು ಮಾಡಿದೆ. 

ಅಂದ ಹಾಗೆ ಈ ಬರೆಯುವ ಕಾಯಕ ಮತ್ತು ನಿಮ್ಮೆಲ್ಲರ ಹಾರೈಕೆ ನಿರಂತರ ವಾಗಿರಲಿ ಎಂದು ಆಶಿಸುತ್ತ, 

ಇಂತಿ

ನಿಮ್ಮ ಪ್ರೀತಿಯ,

ಪಿ.ಎಸ್.ರಂಗನಾಥ